ಗಂಗಾವತಿ:ತುಂಗಭದ್ರಾ ನದಿಯ ಕೃಪೆಯಿಂದ 'ಭತ್ತದ ನಾಡು' ಎಂದು ಹೆಸರಾದ ಹಾಗೂ ಶ್ರೀರಾಮನ ಬಂಟ ಶ್ರೀ ಆಂಜನೇಯನ ಜನ್ಮಸ್ಥಳವಾದ ಕಿಷ್ಕಿಂಧಾ ಪ್ರದೇಶದ ಮಹಿಮೆಯಿಂದ ಗಂಗಾವತಿಯು ಧರ್ಮದ ನೆಲೆಬೀಡಾಗಿ ಕಂಗೊಳಿಸುತ್ತಿದೆ ಎಂದು ಶುಕ್ಲ ಯಜುರ್ವೇದಿಗಳ ಶ್ರೀಮದ್ ಕಣ್ವ ಮಠಾಧೀಶರಾದ ಶ್ರೀ ವಿದ್ಯಾ ಕಣ್ವ ವಿರಾಜತೀರ್ಥ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಧರ್ಮ ಜಾಗೃತಿಗಾಗಿ ಕಮಲಾಪುರಕ್ಕೆ ಆಗಮಿಸಿ, ಅಲ್ಲಿಂದ ಹುಣಸಿಹೊಳೆ ಕಣ್ವ ಪೀಠಕ್ಕೆ ತೆರಳುವ ಮಾರ್ಗಮಧ್ಯದಲ್ಲಿ ಗಂಗಾವತಿಯ ಶ್ರೀ ಯೋಗೇಶ್ವರ ಯಾಜ್ಞವಲ್ಕ್ಯ ಮಂದಿರಕ್ಕೆ ಭೇಟಿ ನೀಡಿದ್ದ ಪೂಜ್ಯರು ಭಕ್ತರನ್ನು ಆಶೀರ್ವದಿಸಿ ಮಾತನಾಡಿದರು. ಧರ್ಮ, ಧಾರ್ಮಿಕ ಆಚರಣೆ ಹಾಗೂ ಸಂಸ್ಕಾರಗಳನ್ನು ಉಳಿಸಿ ಬೆಳೆಸುವಲ್ಲಿ ಗಂಗಾವತಿಯ ಸೇವಾ ಸಮಿತಿಯವರು ಶ್ರಮಿಸುತ್ತಿರುವುದನ್ನು ಅವರು ಮುಕ್ತಕಂಠದಿಂದ ಪ್ರಶಂಸಿಸಿದರು. ಅಧಿಕಮಾಸದ ಪ್ರಯುಕ್ತ 33 ದಿನಗಳ ಕಾಲ ರಾಜ್ಯದ ನಾನಾ ಭಾಗಗಳ ವಿದ್ವಾಂಸರನ್ನು ಆಹ್ವಾನಿಸಿ, 'ಜ್ಞಾನಸತ್ರ'ದ ಅಡಿಯಲ್ಲಿ ಪ್ರವಚನಗಳನ್ನು ಹಮ್ಮಿಕೊಂಡಿರುವುದು ಇಲ್ಲಿನ ಭಕ್ತರ ಧಾರ್ಮಿಕ ಮನೋಭಾವನೆಗೆ ಸಾಕ್ಷಿಯಾಗಿದೆ ಎಂದರು.
ಇದೇ ಹಿನ್ನೆಲೆಯಲ್ಲಿ ತಾವು ದಿನಾಂಕ 13 ರಿಂದ 15 ರವರೆಗೆ ಮೂರು ದಿನಗಳ ಕಾಲ ಇಲ್ಲಿಯೇ ವಾಸ್ತವ್ಯ ಹೂಡಲಿದ್ದು, ತೊಟ್ಟಿಲು ಪೂಜೆ, ಪುರುಷೋತ್ತಮ ಯಾಗ, ತಪ್ತಮುದ್ರಾ ಧಾರಣೆ ಹಾಗೂ ಪಾದಪೂಜೆಯಂತಹ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುವುದಾಗಿ ಶ್ರೀಗಳು ತಿಳಿಸಿದರು.
ಇದಕ್ಕೂ ಮುನ್ನ ಮಂದಿರಕ್ಕೆ ಆಗಮಿಸಿದ ಪೂಜ್ಯರನ್ನು ಸೇವಾ ಸಮಿತಿಯ ಅಧ್ಯಕ್ಷರಾದ ಮುರಳಿಧರ್ ಗಂಗನಾಳ, ಪವನ್ ಜೋಶಿ, ರಾಘವೇಂದ್ರ ಮೇಗೂರು, ಸತೀಶ್ ಶೇಷಗಿರಿ ಕುಲಕರ್ಣಿ, ಗುರುರಾಜ ಚರ್ಚಿನಗುಡ್ಡ, ಆನಂದ್, ಮಣಿ, ಶ್ರೀನಿವಾಸ್ ಕುಲಕರ್ಣಿ, ರಾಮಕೃಷ್ಣ ಆಚಾರ್, ತಿರುಮಲರಾವ್ ಆಲಂಪಲ್ಲಿ, ರಾಘವೇಂದ್ರ ಲೆಕ್ಕಿಹಾಳ, ರಂಗನಾಥ್ ವಟಗಲ್, ಪ್ರಹ್ಲಾದ್ ಕೋಮಲಾಪುರ ಸೇರಿದಂತೆ ಅಪಾರ ಭಕ್ತಾದಿಗಳು ಪೂರ್ಣಕುಂಭದೊಂದಿಗೆ ಭಕ್ತಿಯಿಂದ ಬರಮಾಡಿಕೊಂಡರು.








