ತಹಶೀಲ್ದಾರ್ ಪ್ರದೀಪ್ ಆರ್. ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಮೊದಲು ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪುರಸಭೆಯ ಮುಖ್ಯಾಧಿಕಾರಿಯ ಅನುಪಸ್ಥಿತಿಯ ಬಗ್ಗೆ ಸೇರಿದ ಜನತೆ ಆಕ್ರೋಶ ವ್ಯಕ್ತಪಡಿಸಿದರು. ಪ.ಜಾ. -ಪ.ಪಂ. ಮುಖಂಡರು ಮೊದಲು ಅಧಿಕಾರಿಗಳಲ್ಲಿನ ಸಮಸ್ಯೆ ಪರಿಹರಿಸಿಕೊಳ್ಳಿ ಆಮೇಲೆ ನಮ್ಮನ್ನು ಸಭೆಗೆ ಕರೆಸಿ ಎಂದು ತರಾಟೆಗೆತ್ತಿಕೊಂಡರು. ಅಧಿಕಾರಿಗಳಿಗೆ ನಮ್ಮ ಸಮುದಾಯದ ಬಗ್ಗೆ ಅಸಡ್ಡೆ ಏಕೆ ? ಎಂದು ಪ್ರಶ್ನಿಸಿದ ಅವರು ಹೆಚ್ಚಿನ ಅಧಿಕಾರಿಗಳು ಸಭೆಯಲ್ಲಿರದ ಕಾರಣ ಸಭೆ ತೊರೆದರು.
ಕಾರ್ಕಳ ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಜ. 13 ರಂದು ನಡೆದ ತಾಲೂಕು ಮಟ್ಟದ ಪ. ಜಾ. ಹಾಗೂ ಪ.ಪಂ. ಜನಾಂಗದವರ ಹಿತರಕ್ಷಣಾ ಹಾಗೂ ಕುಂದುಕೊರತೆ ಪೂರ್ವಭಾವಿ ಸಭೆಯಲ್ಲಿ ಸುಮಾರು 57 ಅಹವಾಲುಗಳು ಬಂದಿದ್ದವು. ಮತ್ತಾವು ಸೇತುವೆ, ಈದು ಗ್ರಾಮದಲ್ಲಿ ಪ.ಜಾ-ಪ.ಪಂ.ದವರ ಜಾಗದ ಸಮಸ್ಯೆ, ನೂರಾಲ್ಬೆಟ್ಟಿನಲ್ಲಿ ಮೂಲಸೌಕರ್ಯಗಳ ಕೊರತೆ, ಶಾಲೆಗಳಲ್ಲಿ ಅಕ್ಷರ ದಾಸೋಹ ಸಮಸ್ಯೆ, ಗಣಿ ಇಲಾಖೆ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಸಮುದಾಯದ ಜನತೆ ಸಭೆಯಲ್ಲಿ ಭಾಗಿಯಾಗಿದ್ದರು. ಆದರೆ, ಮುಖ್ಯವಾಗಿ ಬೇಕಿದ್ದ ಅಧಿಕಾರಿಗಳೇ ಸಭೆಯಲ್ಲಿ ಹಾಜರಿರದ ಕಾರಣ ಅವರು ಸಭೆಯನ್ನು ತೊರೆದರು.
ಸಭೆಗೆ ದೌಡಾಯಿಸಿದ ಅಧಿಕಾರಿಗಳು
ಆರಂಭದಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಭೆಯಲ್ಲಿರಲಿಲ್ಲ. ಆದರೆ, ಅವರು ಕೆಲ ಹೊತ್ತಿನ ಬಳಿಕ ಸಭೆಯಲ್ಲಿ ಕಾಣಿಸಿಕೊಂಡರು. ಇಲಾಖಾಧಿಕಾರಿಗಳು ಇಲ್ಲದ ಕುರಿತು ಜನತೆ ಆಕ್ರೋಶಗೊಂಡು ಸಭೆ ಬಹಿಷ್ಕರಿಸಿದ ಮಾಹಿತಿ ತಿಳಿದ ಇತರೆ ಇಲಾಖಾಧಿಕಾರಿಗಳು ಒಬ್ಬೊಬ್ಬರಾಗಿ ಸಭೆಗೆ ಆಗಮಿಸಿದರು.
ಬಳಿಕ ನಡೆದ ಅಧಿಕಾರಿಗಳ ಸಭೆಯಲ್ಲಿ ತಹಶೀಲ್ದಾರ್ ಮಾತನಾಡಿ, ಯಾವ ಇಲಾಖೆಯಲ್ಲಿ ಉಪಸ್ಥಿತರಿರಬೇಕಿದ್ದ ಅಧಿಕಾರಿಗಳ ಪರವಾಗಿ ಬೇರೆಯವರು ಹಾಜರಾಗಿದ್ದರೋ ಆ ಇಲಾಖೆಯನ್ನು ಗೈರು ಎಂದು ಪರಿಗಣಿಸಲಾಗುವುದು. ಮತ್ತೊಮ್ಮೆ ಎಲ್ಲಾ ಇಲಾಖೆಗಳಿಗೆ ನೋಟಿಸ್ ಕಳುಹಿಸಿ ಮುಂದಿನ ಸಭೆಯ ದಿನವನ್ನು ನಿಗದಿಗೊಳಿಸಲಾಗುವುದು ಎಂದರು.








