ಬೆಂಗಳೂರು: ಅಕ್ರಮ ಸಂಬಂಧ ಪ್ರಶ್ನಿಸಿದ ತಾಯಿಯನ್ನು ಪ್ರೇಯಸಿ ಜತೆ ಸೇರಿ ಹಲ್ಲೆ ನಡೆಸಿದ ರಾಮ ಮೂರ್ತಿನಗರ ಠಾಣೆಯ ಪಿಎಸ್ಐ ಮಂಜುನಾಥ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದ್ದು, ಕೃತ್ಯಕ್ಕೆ ಸಂಬಂಧಿಸಿದಂತೆ ಮೂರು ದಿನಗಳ ಒಳಗೆ ಸ್ಪಷ್ಟನೆ ನೀಡುವಂತೆ ನೋಟಿಸ್ ನೀಡಲಾಗಿದೆ.
ಘಟನೆ ಸಂಬಂಧ ದೊಡ್ಡಬಳ್ಳಾಪುರ ನಿವಾಸಿ ಮಂಗಳಮ್ಮ ಎಂಬವರು ನೀಡಿದ ದೂರಿನ ಮೇರೆಗೆ ರಾಮಮೂರ್ತಿನಗರ ಠಾಣೆಯ ಪಿಎಸ್ಐ ಮಂಜುನಾಥ್ ಅವರ ಸ್ನೇಹಿತೆ ಬಸವಜ್ಯೋತಿ, ಈಕೆಯ ಸಹೋದರ ಬಸವ ಪ್ರಭು ಎಂಬವರ ವಿರುದ್ಧ ಕೆ.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು, ಪಿಎಸ್ಐ ಮಂಜುನಾಥ್ನನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ. ಪ್ರಕರಣದ ವಿಚಾರಣೆಗೆ ಹಾಜರಾಗಬೇಕು. 3 ದಿನಗಳ ಒಳಗೆ ಘಟನೆ ಸ್ಪಷ್ಟನೆ ನೀಡಬೇಕು ಎಂದು ನೋಟಿಸ್ ನೀಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಫೆ.16ರಂದು ಇಬ್ಬರು ಪುತ್ರಿಯರಾದ ಮಂಜುಳಾ ಮತ್ತು ಆಶಾ ಅವರೊಂದಿಗೆ ಬಸವಜ್ಯೋತಿಯ ಮನೆಗೆ ಹೋಗಿ, ಪುತ್ರನಿಂದ ದೂರ ಇರುವಂತೆ ಮಂಗಳಮ್ಮ ಬಸವಜ್ಯೋತಿ ಮನವಿ ಮಾಡಿದ್ದರು.ಅದೇ ವೇಳೆ ಪ್ರೇಯಸಿಯ ಮನೆಗೆ ಬಂದ ಪಿಎಸ್ಐ ಮಂಜುನಾಥ್, ತಾಯಿ ಮತ್ತು ಸಹೋದರಿಯರನ್ನು ಇಲ್ಲಿಗೆ ಏಕೆ ಬಂದಿದ್ದಿರಾ ಎಂದು ಪ್ರಶ್ನಿಸಿ, ತಾಯಿ, ಸಹೋದರಿಯರ ಮೇಲೆ, ಪ್ರೇಯಸಿ ಬಸವಜ್ಯೋತಿ, ಈಕೆಯ ಸಹೋದರ ಬಸವಪ್ರಭು ಜತೆ ಸೇರಿ ಹಲ್ಲೆ ನಡೆಸಿದ್ದರು ಎಂದು ಮಂಗಳಮ್ಮ ದೂರಿನಲ್ಲಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಲಾಗಿದ್ದು, ಸೇವೆಯಿಂದ ಅಮಾನತು ಮಾಡಲಾಗಿದೆ.








