ಪ್ರಧಾನಿಗಳ ಆಗಮನಕ್ಕೆ ಸಂಬಂಧಿಸಿದಂತೆ ಆದಿ ಉಡುಪಿ ಮೈದಾನದಲ್ಲಿ ವಿಶೇಷವಾಗಿ ಮೂರು ಹೆಚ್ಚುವರಿ ಹೆಲಿಪ್ಯಾಡ್ಗಳನ್ನು ಸಿದ್ಧಪಡಿಸಲಾಗಿದೆ. ಬುಧವಾರ ದೆಹಲಿಯಿಂದ ಆಗಮಿಸಿದ ವಾಯುಸೇನೆಯ ಹಿರಿಯ ಅಧಿಕಾರಿಗಳ ತಂಡವು ಈ ಹೆಲಿಪ್ಯಾಡ್ಗಳ ಗುಣಮಟ್ಟ ಪರಿಶೀಲಿಸಿತು. ನಂತರ ವಾಯುಸೇನೆಯ ಮೂರು ಹೆಲಿಕಾಪ್ಟರ್ಗಳು ಉಡುಪಿ ಆಕಾಶದಲ್ಲಿ ಹಲವು ಬಾರಿ ಸುತ್ತು ಹೊಡೆದು, ಇಳಿಯುವಿಕೆ-ಟೇಕ್ಆಫ್ ರಿಹರ್ಸಲ್ ನಡೆಸಿದವು. ಯಾವುದೇ ತಾಂತ್ರಿಕ ತೊಂದರೆ ಇಲ್ಲದಿರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ.
ಪ್ರಧಾನಿ ಸವಾರಿ ಮಾಡಲಿರುವ ಆದಿ ಉಡುಪಿ ಮೈದಾನದಿಂದ ಶ್ರೀಕೃಷ್ಣ ಮಠದವರೆಗಿನ ಮಾರ್ಗದಲ್ಲಿ ವಾಹನ ಸಂಚಾರ ರಿಹರ್ಸಲ್ ನಡೆಯಲಿದೆ. ಈ ಮಾರ್ಗದಲ್ಲಿ ಎರಡು ಬಾರಿ ವಾಹನಗಳ ಚಲನೆಯನ್ನು ಪರೀಕ್ಷಿಸಲಾಗುವುದು. ಪ್ರಧಾನಿಗಳ ಸುರಕ್ಷತೆಗಾಗಿ ವಾಯುಸೇನೆ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಜೊತೆಗೆ ಕರ್ನಾಟಕ ರಾಜ್ಯ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಹೊರ ಜಿಲ್ಲೆಗಳಿಂದ ಸಾವಿರಾರು ಪೊಲೀಸರನ್ನು ಕರೆಸಲಾಗಿದೆ.
ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ರಥಬೀದಿ, ಶ್ರೀಕೃಷ್ಣ ಮಠ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಭಕ್ತರ ಪ್ರವೇಶವನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಈ ಅವಧಿಯಲ್ಲಿ ಯಾವುದೇ ಭಕ್ತರು ಒಳಗೆ ಪ್ರವೇಶಿಸಲು ಸಾಧ್ಯವಿಲ್ಲ. ಆದರೆ ಲಕ್ಷಕಂಠ ಕಾರ್ಯಕ್ರಮಕ್ಕೆ ಆಯ್ದ ಪಾಸ್ ಹೊಂದಿರುವವರಿಗೆ ಮಾತ್ರ ಅವಕಾಶವಿದೆ.
ಪ್ರಧಾನಿಗಳ ವೇಳಾಪಟ್ಟಿ
ಬೆಳಗ್ಗೆ 8.15ಕ್ಕೆ ದೆಹಲಿಯಿಂದ ಹೊರಟು 11:05ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದ್ದಾರೆ.
11:10ಕ್ಕೆ ವಿಶೇಷ ಹೆಲಿಕಾಪ್ಟರ್ನಲ್ಲಿ ಹೊರಟು 11:35ಕ್ಕೆ ಉಡುಪಿಯ ಆದಿ ಉಡುಪಿ ಹೆಲಿಪ್ಯಾಡ್ಗೆ ಆಗಮನ.
ಮಧ್ಯಾಹ್ನ 12 ಗಂಟೆಗೆ ಶ್ರೀಕೃಷ್ಣ ದರ್ಶನ, ನಂತರ ಲಕ್ಷಕಂಠ ಗೀತಾ ಪಠಣ ಕಾರ್ಯಕ್ರಮದಲ್ಲಿ ಭಾಗಿ.
1:35 ಕ್ಕೆ ಕಾರಿನಲ್ಲಿ ಹೊರಟು 1:40ಕ್ಕೆ ಹೆಲಿಪ್ಯಾಡ್ ತಲುಪಿ, 2:10ಕ್ಕೆ ಮಂಗಳೂರಿಗೆ ತೆರಳಿ 2:15ಕ್ಕೆ ಗೋವಾಕ್ಕೆ ತೆರಳಲಿದ್ದಾರೆ.
ರಾಜ್ಯ ಬಿಜೆಪಿ ಘಟಕವು ಪ್ರಧಾನಿಯ ಭೇಟಿಯ ಸಮಯದಲ್ಲಿ ರೋಡ್ ಶೋ ನಡೆಸುವ ಯೋಜನೆ ರೂಪಿಸಿದ್ದರೂ, ದೆಹಲಿಯ ಪಿಎಂ ಕಚೇರಿಯು ಯಾವುದೇ ರೀತಿಯ ರೋಡ್ ಶೋಗೆ ಅನುಮತಿ ನೀಡಿಲ್ಲ. ಆದ್ದರಿಂದ, ಪ್ರಧಾನಿ ಮೋದಿ ನೇರವಾಗಿ ಕಾರ್ಯಕ್ರಮ ಸ್ಥಳಕ್ಕೆ ತೆರಳಿ, ಶ್ರೀ ಕೃಷ್ಣನ ದರ್ಶನ ಪಡೆದು, ಲಕ್ಷ ಕಂಠ ಗೀತ ಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂತಿರುಗಲಿದ್ದಾರೆ.








